ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

ಬೆಂಗಳೂರು, ಆ-03-2021: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯು ಪಕ್ಷದ ಪ್ರಧಾನ ಕಛೇರಿಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಮಂಡಿಸಲಾಯಿತು.

  1. ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಬೇಕು.
    ಕಳೆದ ಇಪ್ಪತ್ತು ತಿಂಗಳಿಂದ ಕೋವಿಡ್ ಸಾಂಕ್ರಾಮಿಕದಿಂದ ಜನರು ಭಯಭೀತರಾಗಿದ್ದಾರೆ. ಕೋವಿಡ್ ಹರಡುವಿಕೆ ತಡೆಯಲು ಮುಂಜಾಗ್ರತೆ ಮತ್ತು ಲಸಿಕೆ ಏಕೈಕ ಪರಿಹಾರವಾಗಿದ್ದು, ರಾಜ್ಯದಲ್ಲಿ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಬೇಕು. ಲಸಿಕೆ ಸರಬರಾಜು ಹೆಚ್ಚಿಸಲು ರಾಜ್ಯದ ಮುಖ್ಯ ಮಂತ್ರಿಗಳು, ಸಂಸದರು ಮತ್ತು ಎಲ್ಲಾ ಪಕ್ಷಗಳ ನಾಯಕರು ಒಕ್ಕೂಟ ಸರಕಾರಕ್ಕೆ ಒತ್ತಡ ತರಬೇಕು. ಸರಕಾರೇತರ ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಹಾಗೂ ಜನಸಾಮಾನ್ಯರು ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
  2. ಮಳೆ ಪ್ರವಾಹ ಹಾನಿಗೆ 2 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಬೇಕು.
    ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳ ರಸ್ತೆ ಹಾಗೂ ಸೇತುವೆಗಳು ಹಾನಿಯಾಗಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ ಸುಮಾರು 466 ಗ್ರಾಮಗಳ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿರುತ್ತದೆ. ಈ ಭಾಗದ ಬಹುಪಾಲು ರಸ್ತೆ ಹಾಗೂ ಸೇತುವೆಗಳು ಹಾನಿಯಾಗಿದ್ದು, 13 ಜನರ ಪ್ರಾಣಹಾನಿಯಾಗಿದೆ. ಇದೆಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸದೆ ರಸ್ತೆ ಹಾಗೂ ಸೇತುವೆಗಳ ಪುನರ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಘೋಷಿಸಿರುವ 660 ಕೋಟಿ ರೂಪಾಯಿ ಪರಿಹಾರ ಸಾಲದು. ಈ ಸಂಬಂಧ ರಾಜ್ಯ ಸರ್ಕಾರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಮಾತ್ರ ಮಾಡಿದೆ ಎಂದು ಪಕ್ಷ ಆರೋಪಿಸಿದೆ. ಈ ಭಾಗದ ಜನರ ಮೇಲೆ ರಾಜ್ಯ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದಲ್ಲಿ ಮುಖ್ಯಮಂತ್ರಿಗಳು ಕೂಡಲೇ 2 ಸಾವಿರ ಕೋಟಿ ರೂಪಾಯಿಯ ಪರಿಹಾರ ಬಿಡುಗಡೆಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
  3. ಕಾರ್ಪೊರೇಷನ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶೀಘ್ರ ನಡೆಸಬೇಕು.
    ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಕೆಲವು ಕಾರ್ಪೊರೇಷನ್ ಚುನಾವಣೆಗಳು ಈಗಾಗಲೇ ನಡೆಯಬೇಕಿತ್ತು. ಆದರೆ ಕೆಲವು ಪಕ್ಷಗಳ ಹಾಗೂ ಶಾಸಕರ ಲಾಬಿ, ವಾರ್ಡ್ ಪುನರ್‌ವಿಂಗಡನೆ, ನ್ಯಾಯಾಲಯದ ತಡೆಯಾಜ್ಞೆ, ಅವೈಜ್ಞಾನಿಕ ಮೀಸಲಾತಿ, ಮೊದಲಾದ ನೆಪಗಳಿಂದ ಕೆಲವು ನಗರಗಳಲ್ಲಿ ಕಳೆದ 5-6 ವರ್ಷಗಳಿಂದ ಚುನಾವಣೆ ನಡೆದಿರುವುದಿಲ್ಲ. ಇದರಿಂದ ನಗರಗಳ ಅಭಿವೃದ್ಧಿಯಲ್ಲಿ ಅಡಚನೆಯಾಗುತ್ತಿದೆ. ಆದುದರಿಂದ ಕೋವಿಡ್ ಸಾಂಕ್ರಾಮಿಕ ಮೂರನೇ ಅಲೆಯಲ್ಲಿ ಹೆಚ್ಚು ತೊಂದರೆಯಾಗದಿದ್ದಲ್ಲಿ ಸ್ಥಳೀಯ ಚುನಾವಣೆಗಳಿಗೆ ಪೂರ್ವತಯಾರಿ ಸಿದ್ಧತೆ ನಡೆಸಲು ಚುನಾವಣಾ ಆಯೋಗಕ್ಕೆ ಸರ್ಕಾರ ಎಲ್ಲಾ ರೀತಿಯಿಂದಲೂ ಸಹಕರಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
  4. ಕಳೆದ 3 ವರ್ಷಗಳಲ್ಲಿ 24 ಸಾವಿರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಎನ್.ಸಿ.ಆರ್.ಬಿ ವರದಿಯ ಬಗ್ಗೆ ಆತಂಕ.
    ದೇಶದಲ್ಲಿ 2017-2019ರ ನಡುವೆ 14 ರಿಂದ 18 ವಯಸ್ಸಿನ 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಕಿ ಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್.ಸಿ.ಆರ್.ಬಿ) ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ. ಈ ವರದಿಯ ಪ್ರಕಾರ 24 ಸಾವಿರ ಮಕ್ಕಳಲ್ಲಿ 13,325 ಹೆಣ್ಣು ಮಕ್ಕಳಿದ್ದು, 4,046 ಮಕ್ಕಳು ಶಾಲಾ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಆತಂಕಕಾರಿಯಾಗಿದೆ ಎಂದು ಪಕ್ಷವು ಕಳವಳ ವ್ಯಕ್ತಪಡಿಸಿದೆ.
    ದೇಶದ ಭವಿಷ್ಯ ರೂಪಿಸಬೇಕಾದ ಮಕ್ಕಳು ಪರೀಕ್ಷಾ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸರ್ಕಾರ ಗಮನಹರಿಸಬೇಕಾದ ಅನಿವಾರ್ಯತೆೆ ನಿರ್ಮಾಣವಾಗಿದೆ. ಸರ್ಕಾರ ತಕ್ಷಣ ತಜ್ಞರ ಸಮಿತಿಯೊಂದನ್ನು ರಚಿಸಿ ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಸಿದ್ಧವಾಗಬೇಕಾಗಿದೆ. ಸರ್ಕಾರ ಜಾಣಕುರುಡುತನ ಪ್ರದರ್ಶಿಸದೆ ಜವಾಬ್ದಾರಿಯುತವಾಗಿ ಇದರ ಕಾರಣಗಳನ್ನು ಕಂಡುಹಿಡಿದು ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು ಎಂದು ಪಕ್ಷವು ಅಭಿಪ್ರಾಯ ಪಟ್ಟಿದೆ.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿಗಳಾದ ಅಶ್ರಫ್ ಮಾಚಾರ್, ಅಬ್ರಾರ್ ಅಹಮದ್, ರಾಜ್ಯ ಸಮಿತಿ ಸದಸ್ಯರುಗಳಾದ ಅಬ್ದುಲ್ ಲತೀಫ್, ಅಕ್ರಂ ಹಸನ್, ಜಲೀಲ್ ಕೃಷ್ಣಾಪುರ, ರಹೀಮ್ ಪಟೇಲ್ ಉಪಸ್ಥಿತರಿದ್ದರು.

ಅಕ್ರಮ್ ಹಸನ್
ಮಾಧ್ಯಮ ಉಸ್ತುವಾರಿ
ಎಸ್.ಡಿ.ಪಿ.ಐ ಕರ್ನಾಟಕ
ಮೊಬೈಲ್ 9343342250

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

3 months ago