ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ ಸಚಿವನ ಪುತ್ರ ಸೇರಿ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಎಸ್ ಡಿಪಿಐ ಒತ್ತಾಯ

ನವದೆಹಲಿ: ಉತ್ತರಪ್ರದೇಶದ ಲಖಿಂಪುರ ಖೇರಿ ಎಂಬಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಷ್ ಮಿಶ್ರಾ ತೇನಿ ಅವರು ಕಾರು ಹರಿಸಿ ರೈತರ ಹತ್ಯೆ ಮಾಡಿರುವುದು ಆಘಾತಕಾರಿ ಘಟನೆಯಾಗಿದೆ. ನಾಲ್ವರು ರೈತರನ್ನು ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕೊಲೆ ಸೇರಿದಂತೆ ಐಪಿಸಿಯ ಕಠಿಣ ಕಲಂಗಳಡಿ ಪ್ರಕರಣ ದಾಖಲಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಫೈಝಿ, ಕಾರು ಹರಿಸಿದ ಪರಿಣಾಮ ರೈತರಾದ ಲವ್ ಪ್ರೀತ್ ಸಿಂಗ್ (20) ದಲ್ಜೀತ್ ಸಿಂಗ್ (35), ನಚತ್ತರ್ ಸಿಂಗ್ (60) ಮತ್ತು ಗೌರ್ ವಿಂದರ್ ಸಿಂಗ್ (19) ಸಾವನ್ನಪ್ಪಿದ್ದು, ಅವರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಫೈಝಿ ತಿಳಿಸಿದ್ದಾರೆ.ಮೋಹನ್ ಬಿಶ್ತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉತ್ತರ ಪ್ರದೇಶವು ಅಕ್ಷರಶಃ ಜಂಗಲ್ ರಾಜ್ ಆಗಿ ಬದಲಾಗಿದ್ದು, ಆಡಳಿತ ಪಕ್ಷ ಮತ್ತು ಅವರ ಬೆಂಬಲಿಗ ಗುಂಪುಗಳ ನಿರಂತರ ಗೂಂಡಾಗಿರಿಗೆ ರಾಜ್ಯ ಸಾಕ್ಷಿಯಾಗಿದೆ. ಮುಸ್ಲಿಮರು ಮತ್ತು ದಲಿತರ ಗುಂಪು ಹತ್ಯೆ, ಎನ್‌ ಕೌಂಟರ್ ಹತ್ಯೆ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಇತ್ಯಾದಿಗಳು ರಾಜ್ಯದಲ್ಲಿ ಸಾಮಾನ್ಯವೆಂಬಂತಾಗಿದೆ.ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರದ ಬೆನ್ನೆಲುಬಾಗಿರುವ ರೈತರು, ಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಹಲವು ರೈತರು ಹುತಾತ್ಮರಾಗಿದ್ದಾರೆ. ತನ್ನ ಆಪ್ತ ಬಂಡವಾಳಶಾಹಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಒಕ್ಕೂಟ ಸರ್ಕಾರವು ರೈತರ ಬೇಡಿಕೆಯ ಬಗ್ಗೆ ದಿವ್ಯ ನಿರ್ಲಕ್ಷ್ಯವಹಿಸಿದೆ ಎಂದು ಅವರು ಆಪಾದಿಸಿದ್ದಾರೆ.ಈ ಪರಿಸ್ಥಿತಿಯ ಮಧ್ಯೆ, ಮೂರು ವಾಹನಗಳಲ್ಲಿ ತನ್ನ ಗೂಂಡಾಗಳೊಂದಿಗೆ ಬಂದ ಕೇಂದ್ರ ಸಚಿವರ ಮಗ, ಹೆಲಿಪ್ಯಾಡ್ ನಲ್ಲಿ ಪ್ರತಿಭಟನೆ ನಡೆಸಿ ಹಿಂದಿರುತ್ತಿದ್ದ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಓಡಿಸಿದ್ದಾನೆ. ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ತಜಿಂದರ್ ಸಿಂಗ್ ವಿರ್ಕ್ ಅವರ ಮೇಲೆ ನೇರವಾಗಿ ವಾಹನವನ್ನು ಚಲಾಯಿಸಿ ಹತ್ಯೆಗೆ ಯತ್ನಿಸಿದ್ದಾನೆ. ಮಾತ್ರವಲ್ಲ ರೈತರ ಮೇಲೆ ಗುಂಡು ಹಾರಿಸಲಾಗಿದೆ. ಆಶಿಷ್ ಮಿಶ್ರಾ ತೆನಿ ಮತ್ತು ಆತನ ಗೂಂಡಾಗಳ ಗುಂಡಿನ ದಾಳಿಯಿಂದ ಓರ್ವ ಸಾವನ್ನಪ್ಪಿದ್ದಾನೆ ಎಂದು ಫೈಝಿ ತಿಳಿಸಿದ್ದಾರೆ.ಇಂತಹ ಕ್ರಿಮಿನಲ್ ಕೃತ್ಯಗಳ ಬಗ್ಗೆ ಸರ್ಕಾರದ ಮೌನ ಒಪ್ಪಿಗೆ ಮತ್ತು ಅನುಮೋದನೆಯೇ ಗೂಂಡಾಗಳನ್ನು ಮತ್ತಷ್ಟು ಹಿಂಸೆ ಮತ್ತು ಗೂಂಡಾಗಿರಿಯಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಈ ಸಂದರ್ಭದಲ್ಲಿ, ಗೂಂಡಾ ತನ್ನ ತಂದೆ ಕೇಂದ್ರ ಮಂತ್ರಿಯ ಪ್ರಭಾವ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ಆತನನ್ನು ಪ್ರಕರಣದಿಂದ ರಕ್ಷಿಸಲು ಪ್ರಯತ್ನಿಸುವುದು ಕಂಡುಬರುತ್ತಿದೆ ಎಂದು ಎಂ.ಕೆ.ಫೈಝಿ ಆರೋಪಿಸಿದ್ದಾರೆ.ಈ ಗೂಂಡಾಗಿರಿಯ ವಿರುದ್ಧ ದೇಶಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸಬೇಕು ಎಂದು ಕರೆ ನೀಡಿರುವ ಎಂ.ಕೆ.ಫೈಝಿ, ಹಿಂದುತ್ವ ಫ್ಯಾಶಿಸ್ಟರ ನಿಘಂಟಿನಲ್ಲೇ ಇಲ್ಲದ ನ್ಯಾಯವನ್ನು ಯುಪಿ ಅಥವಾ ಕೇಂದ್ರ ಸರ್ಕಾರದಿಂದ ನಿರೀಕ್ಷಿಸುವ ಅಗತ್ಯವಿಲ್ಲ. ಆದ್ದರಿಂದ ಭಾರತದ ಸುಪ್ರೀಂ ಕೋರ್ಟ್ ಈ ಕೃತ್ಯದ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಚಿವರ ಪುತ್ರ ಸೇರಿದಂತೆ ಎಲ್ಲಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಫೈಝಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

admin

Recent Posts

ಸ್ವಾತಂತ್ರ್ಯ ಪ್ರಯುಕ್ತ ಸಭಾ ಕಾರ್ಯಕ್ರಮ

INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್‌…

3 days ago

ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ

Let's Protect the Freedom, Save the Nation آئیے آزادی کی حفاظت کرین ملک کو بچائیں…

3 days ago

79 Happy Independence Day

Let's Protect The Freedom, Save The Nation "Let us remember the sacrifices that brought us…

3 days ago