ಮಸೀದಿ ಭೂಮಿಯಲ್ಲಿ ಕಟ್ಟಡ ನಿರ್ಮಿಸುವುದು ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿ: ಎಸ್‌ಡಿಪಿಐ

ನವದೆಹಲಿ, ಆಗಸ್ಟ್ 4, 2020: ಬಾಬರಿ ಮಸೀದಿಯನ್ನು ಬಲವಂತವಾಗಿ ಉರುಳಿಸಿದ ನಂತರ ಮಸೀದಿಯ ಭೂಮಿಯಲ್ಲಿ ರಾಮಮಂದಿರ ನಿರ್ಮಿಸುವುದು ಅನೈತಿಕ, ಅನ್ಯಾಯ ಮತ್ತು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯಗಳಿಗೆ ಒಡ್ಡಿರುವ ಸವಾಲು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಹೇಳಿದ್ದಾರೆ.

ಬಾಬರಿ ಮಸೀದಿ ಬಹಳ ಹಿಂದಿನಿಂದಲೂ ಆರ್‌.ಎಸ್‌.ಎಸ್‌ ಗೆ ಒಂದು ರಾಜಕೀಯ ಸಾಧನವಾಗಿದೆ. ರಾಮಮಂದಿರದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನು ಹುಟ್ಟುಹಾಕುವುದರ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಈಗ ಎರಡನೆಯ ಅವಧಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ, ದೇಶದ ಎಲ್ಲಾ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಗಳನ್ನು ಕೇಸರೀಕರಣ ಮಾಡಿದೆ. ಇಂತಹ ಸಂದರ್ಭದಲ್ಲಿ ಅವರು ಯಾವುದೇ ಹೆಚ್ಚಿನ ವಿರೋಧವಿಲ್ಲದೆ ಮಸೀದಿಯ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಮುಂದಾಗಿದ್ದಾರೆ.

ಬಾಬರಿ ಮಸೀದಿ ಪ್ರಕರಣ ಕುರಿತ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪನ್ನು ಅನೇಕ ಕಾನೂನು ತಜ್ಞರು ಮತ್ತು ಬುದ್ಧಿಜೀವಿಗಳು ಅನ್ಯಾಯದ ತೀರ್ಪು ಎಂದು ಹೇಳಿ ಅದನ್ನು ತಿರಸ್ಕರಿಸಿದ್ದಾರೆ. ತೀರ್ಪಿನಲ್ಲಿ ಪಟ್ಟಿ ಮಾಡಲಾಗಿರುವ ತನ್ನದೇ ಆದ ಅಂಶಗಳ ವಿರುದ್ಧ ಸುಪ್ರೀಂಕೋರ್ಟ್ ತೀರ್ಮಾನ ಕೈಗೊಂಡು, ದೇವಾಲಯ ನಿರ್ಮಿಸಲು ಮಸೀದಿ ಭೂಮಿಯನ್ನು ಹಸ್ತಾಂತರಿಸಿದೆ.

ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣ ವಿಷಯದಲ್ಲಿ ಬಿಜೆಪಿಯನ್ನು ಈಗ ಅತ್ಯುತ್ಸಾಹದಿಂದ ಹಿಂದಿಕ್ಕಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್  ಪಕ್ಷ ಕೂಡ, ಸುಪ್ರೀಂಕೋರ್ಟ್ ಆದೇಶವನ್ನು ಅನ್ಯಾಯವೆಂದು ಖಂಡಿಸಿತ್ತು.

ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು, 1949ರಲ್ಲಿ ಮಸೀದಿಯೊಳಗೆ ರಾಮ ವಿಗ್ರಹವನ್ನು ಅಕ್ರಮವಾಗಿ ಇಡುವುದರಿಂದ ಹಿಡಿದು 1992ರಲ್ಲಿ ಮಸೀದಿಯನ್ನು ಉರುಳಿಸುವವರೆಗೆ ಹಲವು ರೀತಿಯಲ್ಲಿ ಆರ್‌.ಎಸ್‌.ಎಸ್‌ ನ ಕಾರ್ಯಸೂಚಿಗೆ ಅನುಕೂಲ ಮಾಡಿಕೊಟ್ಟಿತ್ತು ಎಂಬುದನ್ನು ನೆನಪಿನಲ್ಲಿಡಬೇಕು. ಅನೇಕ ಕಾಂಗ್ರೆಸ್ ನಾಯಕರು ಈಗ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಆಹ್ವಾನಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವಾಲಯದ ನಿರ್ಮಾಣವು ಎಲ್ಲಾ ಭಾರತೀಯರ ಒಪ್ಪಿಗೆಯೊಂದಿಗೆ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ತಮ್ಮ ನಿರಂತರ ಸೋಲುಗಳಿಗೆ ಅವರ ಗುಪ್ತ ಹಿಂದುತ್ವದ ಅಜೆಂಡಾ ಕಾರಣ ಎಂಬುದನ್ನು ಇನ್ನೂ ತಿಳಿದುಕೊಂಡಂತಿಲ್ಲ. ಆದರೆ, ಹಿಂದುತ್ವ ಕಾರ್ಯಸೂಚಿಯಲ್ಲಿ ಬಿಜೆಪಿಯೊಂದಿಗೆ ಸ್ಪರ್ಧಿಸುವ ಮೂಲಕ ಅಧಿಕಾರಕ್ಕೆ ಮರಳುವ ಮೂರ್ಖ ಕನಸನ್ನು ಇನ್ನೂ ಅವರು ಕಾಣುತ್ತಿದ್ದಾರೆ.

ಭೂಮಿಪೂಜೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. 130 ಕೋಟಿ ವೈವಿಧ್ಯಮಯ ಜನರ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಭಾರತದ ಪ್ರಧಾನ ಮಂತ್ರಿ ಎಂಬ ಅಂಶವನ್ನು ಮೋದಿ ಮರೆತಿದ್ದಾರೆ. ದೇಶದ ಪ್ರಧಾನ ಮಂತ್ರಿಯಾಗಿ ಅವರು ಸಮಾರಂಭದಲ್ಲಿ ಭಾಗವಹಿಸುವುದು ಅನೈತಿಕ, ಪ್ರತಿಜ್ಞಾವಿಧಿ ಉಲ್ಲಂಘನೆ ಮತ್ತು ಅಸಂವಿಧಾನಿಕ ಕೃತ್ಯವಾಗಿದೆ.

ಬಿಜೆಪಿ ಸರ್ಕಾರದ ಆಕ್ರಮಣಕಾರಿ ಮತ್ತು ಪ್ರಚೋದನಕಾರಿ ಕ್ರಮಗಳನ್ನು ವಿರೋಧಿಸಬೇಕು ಮತ್ತು ಬಾಬರಿ ಮಸೀದಿ ವಿಷಯದಲ್ಲಿ ಮುಸ್ಲಿಂ ಸಮುದಾಯದ ನೈಜ ಕಾಳಜಿಯೊಂದಿಗೆ ದೃಢವಾಗಿ ನಿಲ್ಲಬೇಕು ಎಂದು ಎಂ. ಕೆ. ಫೈಝಿ, ಎಲ್ಲಾ ಜಾತ್ಯತೀತ ಜನರು ಮತ್ತು ಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಧನ್ಯವಾದಗಳೊಂದಿಗೆ..,

               ಇಂತಿ 
           ತಮ್ಮ ವಿಶ್ವಾಸಿ 
  (ಅಬ್ರಾರ್ ಆಹಮದ್)

ರಾಜ್ಯ ಮಾಧ್ಯಮ ಸಂಯೋಜಕರು
ಮೊ.9972726973

admin

Recent Posts

باوقار سياست

کے لیے SDPI میں شامل ہوں 10 MAY 2026 TO 25 MAY ممبر شپ کیمپین…

2 weeks ago