KannadaPressReleases

ಪತ್ರಿಕಾ ಪ್ರಕಟಣೆ ಅತ್ತಿಬೆಲೆ ಪಟಾಕಿ ದುರಂತ ಕೊನೆಯ ಎಚ್ಚರಿಕೆಯಾಗಲಿ. ಸರ್ಕಾರ ಪಟಾಕಿ ಕಾರ್ಮಿಕರ ಸುರಕ್ಷತೆಗೆ ಪ್ರಬಲ ನಿಯಮ ರೂಪಿಸಲಿ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 09 ಅಕ್ಟೋಬರ್ 2023: ಅಗ್ನಿ ಅವಘಡದಲ್ಲಿ 14 ಜನ ಮೃತರಾಗಿದ್ದು, ಏಳು ಜನರು ಗಂಭೀರ ಸ್ಥಿತಿ ತಲುಪಿರುವ ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತ ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ ಗಾಯಗೊಂಡಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಇಂತಹ ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇದು ಬಹಳ ದೊಡ್ಡ ದುರಂತವಾಗಿದ್ದು, ಇನ್ನು ಮುಂದೆ ಇಂತಹ ಅನಾಹುತಗಳು ನಡೆಯದಂತೆ ಸರ್ಕಾರ ಪಟಾಕಿ ಕಾರ್ಮಿಕರ ಸುರಕ್ಷತೆಗೆ ಪ್ರಬಲ ನಿಯಮ ರೂಪಿಸಲಿ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜಿದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟಾಕಿ ಉದ್ಯಮ ಸೇರಿದಂತೆ ಬಹಳಷ್ಟು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರ ಸುರಕ್ಷತೆ ವಿಚಾರವಾಗಿ ಸರ್ಕಾರ ಗಂಭೀರವಾದ ಸುರಕ್ಷತಾ ನಿಯಮಗಳನ್ನು ರೂಪಿಸಬೇಕು. ಇಂತಹ ಅಪಾಯಕಾರಿ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಅಸಂಘಟಿತ ಕಾರ್ಮಿಕರ ಗುಂಪಿನಲ್ಲಿಯೇ ಅತ್ಯಂತ ನಿರ್ಲಕ್ಷಿತ ಗುಂಪಾಗಿದ್ದಾರೆ. ಅದಕ್ಕೆ ಕಾರಣ ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತವು ಕೂಡ ಇಂತಹದ್ದೇ ಕಾರ್ಮಿಕರನ್ನು ಒಳಗೊಂಡಿದೆ. ಮೃತರಲ್ಲಿ ಸಾಕಷ್ಟು ಮಂದಿ ಪದವೀಧರರು ಎಂಬುದು ಆಘಾತಕಾರಿ ಸಂಗತಿ. ಇನ್ನೂ ಕೆಲವರು ಪದವಿ ವಿದ್ಯಾರ್ಥಿಗಳಾಗಿದ್ದು ಬಡತನದ ಕಾರಣಕ್ಕೆ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಅರೆಕಾಲಿಕ ಉದ್ಯೋಗಿಗಳಾಗಿ ಈ ಪಟಾಕಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತೀವ್ರ ಬಡತನದ ಈ ಕುಟುಂಬಗಳಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ಗಾಯಗೊಂಡಿರುವ ಕಾರ್ಮಿಕರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಅಬ್ದುಲ್ ಮಜೀದ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗಾಯದ ಮೇಲೆ ಬರೆ ಎಂಬಂತೆ ಮೃತ ದೇಹಗಳನ್ನು ಕುಟುಂಬಸ್ಥರಿಗೆ ತೋರಿಸದೆ, ಮೃತ ದೇಹ ತೋರಿಸಿ ಎಂದು ಆಗ್ರಹಿಸಿದ ಪೋಷಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ ಎಂಬುದು ಆಘಾತಕಾರಿ ಸಂಗತಿ. ಪೊಲೀಸರ ಈ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ಇರುವ ಗೊಂದಲವನ್ನು ತಕ್ಷಣ ಪರಿಹರಿಸಿ ಕುಟುಂಬ ಸದಸ್ಯರಿಗೆ ಮೃತ ದೇಹಗಳನ್ನು ಹಸ್ತಾಂತರಿಸುವ ಕಾರ್ಯ ತಕ್ಷಣ ನಡೆಯಬೇಕು. ಇದರ ಜೊತೆಗೆ ಅಧಿಕಾರಿಗಳು ಲಂಚ ಪಡೆದು ಅಕ್ರಮವಾಗಿ NOC ನೀಡಿದ್ದರು ಎಂಬ ಗಂಭೀರ ಆರೋಪಿಗಳು ಕೇಳಿಬರುತ್ತಿದ್ದು, ಹತ್ತಾರು ಜನರ ಜೀವ ಬಲಿ ಪಡೆದ ಈ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದ್ದರೆ ಅವರ ವಿರುದ್ಧ ಕೊಲೆ ಕೇಸು ದಾಖಲಿಸಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

#SDPIKarnataka#Bangalore#AttibeleIncident

admin

Recent Posts

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

2 weeks ago

Will fight for every citizen of this country

Prakash Raj, Abdul Majeed SDPI and several others detained by Bengaluru Police During Election Commission…

2 weeks ago

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

3 weeks ago