ಬೆಂಗಳೂರು : ಅ. 5 :
ಇಂಧನ ಸಚಿವ ಕೆ.ಜೆ. ಜಾರ್ಜ್ ಕರ್ತವ್ಯ ನಿರತ ವಿಶೇಷ ಅಧಿಕಾರಿ (ಒಎಸ್ಡಿ) ಯಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಂಧನ ಆಗಿರುವ ಘಟನೆ ಸಚಿವರ ಕಚೇರಿಯ ಭ್ರಷ್ಟಾಚಾರದ ನಿಜ ಮುಖವನ್ನು ಬಯಲು ಮಾಡಿದೆ. ಇಂಧನ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಸಚಿವರ ಒ.ಎಸ್.ಡಿ ಜ್ಯೋತಿ ಪ್ರಕಾಶ್ ಮತ್ತು ಅವರ ಚಾಲಕ ನವೀನ್ ಎಂ ಅವರು ಖಾಸಗಿ ಕಂಪನಿಗೆ ಎನ್ಒಸಿ ನೀಡಲು ಲಂಚ ಕೇಳಿ ಪಡೆದ ಆರೋಪದಲ್ಲಿ ಬಂಧಿತರಾಗಿದ್ದಾರೆ. ಈ ಪ್ರಕರಣದಲ್ಲಿ ಸಚಿವರ ಪಾತ್ರದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು ಮತ್ತು ತನಿಖೆಗೆ ಪೂರಕವಾಗಿ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್ ಆಗ್ರಹಿಸಿದ್ದಾರೆ.
ಈ ಘಟನೆ ಯಾವುದೇ ಏಕಾಏಕಿ ನಡೆದದ್ದಲ್ಲ, ಇದು ಕೆ.ಜೆ. ಜಾರ್ಜ್ ಅವರ ಮೇಲ್ವಿಚಾರಣೆಯಲ್ಲಿರುವ ಇಲಾಖೆಯ ವ್ಯಾಪಕ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಗೆ ಹಿಡಿದ ಕೈಗನ್ನಡಿಯಾಗಿದೆ.
ಕೆ.ಜೆ ಜಾರ್ಜ್ ಪ್ರತಿನಿಧಿಸುತ್ತಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಸ್ಥಿತಿ ಅತ್ಯಂತ ಹೀನವಾಗಿದೆ. ಈ ಕ್ಷೇತ್ರವೂ ವಿಧಾನಸೌಧದಿಂದ ಒಂದೆರಡು ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದರೂ ಸಚಿವರಿಗೆ ಈ ಕ್ಷೇತ್ರದ ಬಗ್ಗೆ ಯಾವುದೇ ಕಾಳಜಿ ಇಲ್ಲ ರಸ್ತೆಗಳು ಹಾಳಾಗಿವೆ, ಕಸದ ರಾಶಿಗಳು ಬೀದಿ ಬೀದಿಗಳಲ್ಲಿ ಬಿದ್ದಿವೆ. ರೈಲ್ವೆ ಸಮಸ್ಯೆ ವರ್ಷಗಳಿಂದ ಹಾಗೆಯೇ ಇದೆ, ಟ್ರಾಫಿಕ್ ಗೊಂದಲ ಹೆಚ್ಚಾಗುತ್ತಿದೆ. ಕುಡಿಯುವ ನೀರು ಮತ್ತು ಸ್ವಚ್ಛತೆಯ ಸಮಸ್ಯೆಗಳಿಗೆ ಸರ್ಕಾರ ಯಾವುದೇ ತಲೆಕೆಡಿಸಿಕೊಳ್ಳುವುದಿಲ್ಲ.
ಜನರ ಜೀವನ ಸುಧಾರಿಸುವ ಬದಲು, ಸಚಿವರು ಮತ್ತು ಅವರ ಅಧಿಕಾರಿಗಳು ಹಣ ಲೂಟಿಯಲ್ಲಿ ತೊಡಗಿದ್ದಾರೆ. ಲಂಚ, ಅಧಿಕಾರ ದುರುಪಯೋಗಗಳ ಮೂಲಕ ಅಧಿಕಾರವನ್ನು ವೈಯಕ್ತಿಕ ಲಾಭದಾಸೆಯ ಸಾಧನವಾಗಿ ಮಾಡಿಕೊಂಡಿದ್ದಾರೆ.
ಕೆ.ಜೆ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪ್ರಕರಣದಲ್ಲಿ ಅನ್ಯಾಯವಾಗಿ ಬಂಧಿತರಾದ ಅನೇಕ ನಿರಪರಾಧಿ ಯುವಕರ ಕುಟುಂಬಗಳು ಇಂದಿಗೂ ಸಂಕಷ್ಟದಲ್ಲಿವೆ. ಸಚಿವರು ಇದೇ ಕ್ಷೇತ್ರದ ಅಮಾಯಕರ ಬಂಧನ ನಡೆದು ಐದು ವರ್ಷವಾದರೂ ಇನ್ನೂ 37 ಮಂದಿ UAPA ಎಂಬ ಕರಾಳ ಕಾನೂನಿನಡಿ ಜಾಮೀನು ಕೂಡ ಇಲ್ಲದೆ ಪರಿತಪಿಸುತ್ತಿದ್ದಾರೆ. ಇವರ ಮತದಾರರೇ ಆಗಿರುವ ಆ ಸಂತ್ರಸ್ತ ಜನರಿಗೆ ಸಚಿವ ಕೆ.ಜೆ. ಜಾರ್ಜ್ ಅವರು ಆ ಕುಟುಂಬಗಳನ್ನು ಒಂದೇ ಒಂದು ಬಾರಿ ಭೇಟಿ ಮಾಡುವ ಶ್ರದ್ಧೆ ತೋರಿಲ್ಲ. ಅವರ ನೋವು ನೋಡುವ ಕನಿಷ್ಠ ಮಾನವೀಯ ಕಾಳಜಿಯೂ ತೋರಲಿಲ್ಲ.
ಜನಸೇವೆಯ ಬದಲು ಅಧಿಕಾರದ ದುರುಪಯೋಗದ ಅಹಂಕಾರ ಮತ್ತು ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಜನತೆ ಈಗ ತಿಳಿಯ ಬೇಕಾಗಿದೆ. ಈ ದ್ರೋಹಕ್ಕೆ ಪ್ರಜಾಸತ್ತಾತ್ಮಕ ಉತ್ತರ ನೀಡುವ ಸಮಯ ಬಂದಿದೆ. ಜನರ ನಂಬಿಕೆಯನ್ನು ಮಣ್ಣುಮಾಡಿದ ಭ್ರಷ್ಟ ರಾಜಕಾರಣಕ್ಕೆ ಅಂತ್ಯ ಹಾಡಿ ಶುದ್ಧ ಜನಪರ ಆಡಳಿತ ಹಾಗೂ ನಿಜವಾದ ಅಭಿವೃದ್ಧಿಯನ್ನು ಮಾಡುವ ಒಬ್ಬ ನೈಜ ಮಾದರಿ ಜನಪ್ರತಿನಿಧಿ ಈ ಕ್ಷೇತ್ರಕ್ಕೆ ಬೇಕಾಗಿದೆ. ಈ ಬಗ್ಗೆ ಚಿಂತನಮಂತನ ನಡೆಸಿ ಎಂದು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್ ಕರೆ ನೀಡಿದ್ದಾರೆ.