02
Nov

ಕರ್ನಾಟಕದ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.ಎಸ್.ಡಿ.ಪಿ.ಐ. ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 66ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಮಾಡಿರುವ ಶಿಫಾರಸುಗಳ ಪೈಕಿ ಪ್ರಮುಖವಾಗಿರುವ 24 ಶಿಫಾರಸುಗಳನ್ನು ತಕ್ಷಣ ಜಾರಿಗೆ ತರಬೇಕು, ತಪ್ಪಿದರೆ ಪಕ್ಷದ ವತಿಯಿಂದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು. ರಾಜ್ಯ ಸರ್ಕಾರ ಕನ್ನಡ ಧ್ವಜಾರೋಹಣ ಮಾಡಬಾರದೆಂದು ಆದೇಶ ಹೊರಡಿಸಿರುವುದು ಖಂಡನಾರ್ಹ. ಕನ್ನಡ ರಾಜ್ಯೋತ್ಸವದಂದು ನಾಡ ಧ್ವಜವಲ್ಲದೇ ಭಾಗವಾಧ್ವಜವನ್ನು ಹರಿಸಬೇಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಗೊಳಿಸಬಾರದು. ಕನ್ನಡ ಭಾಷೆ ಕರುನಾಡಿನ ಹೆಮ್ಮೆಯ ಭಾಷೆಯಾಗಿದೆ. ಒಕ್ಕೂಟ ಸರಕಾರದ ಹಿಂದಿ ಹೇರಿಕೆ ಕ್ರಮದ ವಿರುದ್ಧ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲಾ ನಾಗರಿಕರು ಜಾತಿ ಭೇದ ಮರೆತು ಒಂದಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅಫ್ಸರ್ ಕೊಡ್ಲಿಪೇಟೆ ಒತ್ತಿ ಹೇಳಿದರು.ಈ ವೇಳೆ ಎಸ್.ಡಿ.ಪಿ.ಐ ಬೆಂಗಳೂರು ಜಿಲ್ಲಾಧ್ಯಕ್ಷ ಡಾ. ಮುಜಾಹಿದ್ ಪಾಷ, ಉಪಾಧ್ಯಕ್ಷ ಸಿ. ವಿ. ರಮೇಶ್ ಕುಮಾರ್, ಟಿಪ್ಪು ಅಂಬೇಡ್ಕರ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಬಾರ್ಲೇನ್ ಮಸ್ಜಿದ್ ಅಧ್ಯಕ್ಷ ಸನಾವುಲ್ಲಾ ಶರೀಫ್, ಎಸ್.ಡಿ.ಪಿ.ಐ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಮೆಹಬೂಬ್, ಟಿಪ್ಪು ಸೇನೆ ಅಧ್ಯಕ್ಷ ಶಫಿಯುಲ್ಲಾ, ಮಾರ್ಕೆಟ್ ವಾರ್ಡ್ ಅಧ್ಯಕ್ಷ ಸಲೀಂ ಉಲ್ಲಾ ಉಪಸ್ಥಿತರಿದ್ದರು.

Leave A Comment