17
May

ಗ್ಯಾನ್‌ವಾಪಿ ಮಸೀದಿಯ ಒಂದು ಭಾಗವನ್ನು ಮುಚ್ಚುವ ಕೋರ್ಟ್ ಆದೇಶ – ಆರಾಧನಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ: ಎಸ್.ಡಿ.ಪಿ.ಐ

ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ ಒಂದು ಭಾಗವನ್ನು ಮುಚ್ಚಲು ಗೌರವಾನ್ವಿತ ವಾರಣಾಸಿ ನ್ಯಾಯಾಲಯ ನೀಡಿರುವ ಆದೇಶವು, ಆರಾಧನಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎಸ್.ಡಿ.ಪಿ.
ಐ ರಾಷ್ಟೀಯ  ಅಧ್ಯಕ್ಷ  ಎಂ.ಕೆ ಫೈಝಿ ಅವರು  ಆರೋಪಿಸಿದ್ದಾರೆ.

ಆರಾಧನಾ ಸ್ಥಳದ ಧಾರ್ಮಿಕ ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆಯೇ ಇರಬೇಕು ಹಾಗೂ ಯಾವುದೇ ಧಾರ್ಮಿಕ ಪಂಥದ ಪವಿತ್ರ ಸ್ಥಳವನ್ನು ಯಾರೂ ಇನ್ನೊಂದು ಪಂಗಡ ಅಥವಾ ವಿಭಾಗಕ್ಕೆ ಪರಿವರ್ತಿಸಬಾರದು ಎಂದು 1991ರ ಆರಾಧನಾ ಸ್ಥಳಗಳ ಕಾಯ್ದೆ ಪ್ರತಿಪಾದಿಸುತ್ತದೆ.

ಗ್ಯಾನ್‌ವಾಪಿ ಮಸೀದಿಗೆ ಸಂಬಂಧಿಸಿದ ವಿವಾದ ಹೊಸದೇನಲ್ಲ, ಆದರೆ ಇತರ ಧಾರ್ಮಿಕ ವಲಯಗಳು, ವಿಶೇಷವಾಗಿ ಮುಸ್ಲಿಮರು ನಿರ್ಮಿಸಿದ ಮತ್ತು ಅವರ ಒಡೆತನದಲ್ಲಿರುವ ಧಾರ್ಮಿಕ ಆರಾಧನಾ ಸ್ಥಳಗಳು ಮತ್ತು ಐತಿಹಾಸಿಕ ಸ್ಮಾರಕಗಳ ಮಾಲಿಕತ್ವವನ್ನು ನಾಶಪಡಿಸುವುದು ಅಥವಾ ಕಸಿದುಕೊಳ್ಳುವುದು ಆರ್.ಎಸ್.ಎಸ್. ಕಾರ್ಯಸೂಚಿಯ ಭಾಗವಾಗಿದೆ. ಸ್ವತಃ ಅವರೇ ಹೇಳಿಕೊಂಡಂತೆ, ಮುಸ್ಲಿಮರಿಂದ ವಶಪಡಿಸಿಕೊಳ್ಳಲು ಅಥವಾ ನೆಲಸಮಗೊಳಿಸಲು 3,000 ಮಸೀದಿಗಳ ಪಟ್ಟಿಯನ್ನು ತಯಾರುಗೊಳಿಸಿದ್ದಾರೆ. ಗ್ಯಾನ್‌ವಾಪಿ ಈ ಪಟ್ಟಿಯಲ್ಲಿನ ಎರಡನೇ ಮಸೀದಿಯಾಗಿದೆ. ಬಾಬರಿ ಮಸೀದಿ ಮೊದಲನೆಯದು.

ಬಾಬರಿ ಮಸೀದಿ ನೆಲಸಮಗೊಳಿಸಿದ ಅದೇ ಮಾದರಿಯನ್ನು ಗ್ಯಾನ್‌ವಾಪಿ ಮಸೀದಿಯ ವಿಷಯದಲ್ಲೂ ಅನುಸರಿಸಲಾಗುತ್ತಿದೆ. ‘ವಿದೇಶಿ’ ಧರ್ಮಗಳು ಮತ್ತು ಅವುಗಳ ಸಂಕೇತಗಳನ್ನು ನಾಶಪಡಿಸುವುದು ಮನುವಾದಿ ಹಿಂದುತ್ವ ರಾಷ್ಟ್ರದೆಡೆಗಿನ ಪ್ರಯಾಣದ ಪ್ರಮುಖ ಉದ್ದೇಶವಾಗಿದೆ. ಆದರೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದೇಶದ ಜಾತ್ಯಾತೀತ ಜನರ ಬೆಂಬಲದೊಂದಿಗೆ, ದೇಶದಲ್ಲಿ ಮಸೀದಿ ಧ್ವಂಸ ಮತ್ತು ಶಾಂತಿ ಕದಡುವ ಯಾವುದೇ ಕೃತ್ಯಗಳನ್ನು ಸೋಲಿಸಲಿದೆ ಎಂದಿದ್ದಾರೆ.

ತೀವ್ರ ಬಲಪಂಥೀಯ ಹಿಂದುತ್ವ ಫ್ಯಾಸಿಸ್ಟರು 2014 ರಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಂದಿನಿಂದ ದೇಶದ ಸಂವಿಧಾನವನ್ನು ಮೂಲೆಗುಂಪಾಗಿಸಿದ್ದಾರೆ. 1991ರ ಆರಾಧನಾ ಸ್ಥಳಗಳ ಅಧಿನಿಯಮದಲ್ಲಿ ಕಲ್ಪಿಸಿದಂತೆ, ಮುಸ್ಲಿಂ ಆರಾಧನಾ ಸ್ಥಳಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರದಲ್ಲಿರುವ ತೀವ್ರಗಾಮಿಗಳು ಧನಾತ್ಮಕವಾಗಿ ಏನನ್ನಾದರೂ ಮಾಡುತ್ತಾರೆಂದು ನಿರೀಕ್ಷಿಸುವುದು ಮೂರ್ಖತನವಾಗಿದೆ. ಆದ್ದರಿಂದ, ದೇಶದ ನಾಗರಿಕರ ಶಾಂತಿಯುತ ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಘ ಪರಿವಾರ ದೇಶವನ್ನು ಮತ್ತಷ್ಟು ಹಾಳುಮಾಡದಂತೆ ಪ್ರತಿರೋಧಿಸಲು ಜಾತ್ಯಾತೀತ ಜನರು ಒಗ್ಗಟ್ಟಾಗಿ ಕೈಜೋಡಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಧ್ಯಕ್ಷ ಎಂ.ಕೆ ಫೈಝಿ ಆಗ್ರಹಿಸಿದ್ದಾರೆ.

Leave A Comment