31
Dec

ಪಿಲಿಯಾಪಟ್ಟಣದಲ್ಲಿರುವ ಸೆಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ- ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ರವರ ನೇತೃತ್ವದಲ್ಲಿ ಎಸ್.ಡಿ.ಪಿ.ಐ. ನಿಯೋಗ ಸ್ಥಳಕ್ಕೆ ಭೇಟಿ

ಪಿರಿಯಾಪಟ್ಟಣ ನಗರದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೆಂಟ್ ಮ್ಯಾರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆಯ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಅವರ ನೇತೃತ್ವದಲ್ಲಿ ಎಸ್.ಡಿ.ಪಿ.ಐ ನಿಯೋಗ ಇಂದು ಸಂಜೆ ಸ್ಥಳಕ್ಕೆ ಭೇಟಿ ನೀಡಿತು. ಆ ಸಂದರ್ಭದಲ್ಲಿ ಚರ್ಚಿನ ಫಾದರ್ ರವರಾದ ಜಾನ್ ಪೌಲ್ ರವರನ್ನು ಭೇಟಿ ಮಾಡಿ ಘಟನೆಯನ್ನು ಖಂಡಿಸಲಾಯಿತು. ಈ ದೇಶಕ್ಕೆ ಮತ್ತು ನಾಡಿಗೆ ಕ್ರೈಸ್ತ ಸಮುದಾಯದ ನಡೆಸುತ್ತಿರುವ ಸಂಸ್ಥೆಗಳು ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿವೆ. ಇಂತಹ ಸಮುದಾಯದ ಪ್ರಾರ್ಥನಾ ಮಂದಿರದ ಮೇಲೆ ಇಂತಹ ಕೃತ್ಯ ನಡೆದಿರುವುದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಕಡೆಯಿಂದ ಚರ್ಚಿನ ಫಾದರ್ ಅವರಿಗೆ ನೈತಿಕ ಬಲ ತುಂಬಬೇಕು ಹಾಗೆ ರಾಜ್ಯದ ಯಾವ ಭಾಗದಲ್ಲೂ ಇಂತಹ ಕೃತ್ಯಗಳು ನಡೆಯದಂತೆ ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಗೆ ಗೃಹಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಸೂಚನೆ ನೀಡಬೇಕು. ಇಂತಹ ಕೃತ್ಯಗಳನ್ನು ಮರುಕಳಿಸಿದರೆ ನಮ್ಮ ಪಕ್ಷ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮಜೀದ್ ಅವರು ತಿಳಿಸಿದರು. ಪಿರಿಯಾಪಟ್ಟಣದ ಸೆಂಟ್ ಮೇರಿಸ್ ಚರ್ಚಿನ ಫಾದರ್ ರವರಿಗೆ ನೈತಿಕ ಬೆಂಬಲವನ್ನು ನೀಡುವುದರ ಜೊತೆಗೆ ಪಕ್ಷವು ಸದಾ ಕಾಲ ಅವರ ಬೆಂಬಲಕ್ಕೆ ಇರುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಈ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಅಬ್ದುಲ್ ಮಜೀದ್ ರವರು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಜಾಝ್ ಅಹಮದ್‌, ಮೈಸೂರು ನಗರಾಧ್ಯಕ್ಷರಾದ ರಫತ್ ಖಾನ್, ಮೈಸೂರು ನಗರ ಉಪಾಧ್ಯಕ್ಷರಾದ ಹಾಗು ಮಾಜಿ ಮಹಾನಗರ ಪಾಲಿಕೆ ಸದಸ್ಯ ಎಸ್‌. ಸ್ವಾಮಿ, ಪಿರಿಯಾಪಟ್ಟಣ ತಾಲ್ಲೂಕು ಅಧ್ಯಕ್ಷರಾದ ಮುಬೀರ್‌ ಅಹಮದ್‌, ಪಿರಿಯಾಪಟ್ಟಣ ತಾಲ್ಲೂಕು ಎಸ್‌ಡಿಪಿಐ ಮುಖಂಡರಾದ ವೆಂಕಟೇಶ, ಜಿಲ್ಲಾ ಕಾರ್ಯದರ್ಶಿ ಸತೀಶ ಸನಹಳ್ಳಿ, ಹುಣಸೂರು ತಾಲ್ಲೂಕು ಅಧ್ಯಕ್ಷರಾದ ಮಹಮ್ಮದ್ ತಬ್ರೇಝ್ ತಾಲ್ಲೂಕು ಕಾರ್ಯದರ್ಶಿ ಮುಸ್ತಫ ಖಾನ್‌, ನಗರಸಭಾ ಸದಸ್ಯರುಗಳಾದ ಸೈಯದ್‌ ಯೂನುಸ್, ಸಮೀನ ಇಮ್ರಾನ್ ಅವರು ಹಾಜರಿದ್ದರು.

Leave A Comment