01
Sep

ವೃದಾಪ್ಯ, ವಿಧವೆ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಸಂಧ್ಯಾ ಸುರಕ್ಷ ಹೀಗೆ ಅನೇಕ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಪಡೆಯುತ್ತಿರುವ ಪಿಂಚಣಿದಾರರಿಗೆ ಕಳೆದ 7-8 ತಿಂಗಳಿಂದ ಪಿಂಚಣಿ ಹಣ ಸಂದಾಯವಾಗಿಲ್ಲದ ಕಾರಣ ಪಿಂಚಣಿದಾರರ ಜೀವನ ಅಸ್ತವ್ಯಸ್ತವಾಗಿದೆ. ಒಂದು ಮಾಹಿತಿ ಪ್ರಕಾರ ರಾಜ್ಯದಲ್ಲಿ ಸುಮಾರು 3.50 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಸ್ಥಗಿತಗೊಂಡಿದೆ. ಪಿಂಚಣಿ ಪಡೆಯಲು ನಾಡ ಕಛೇರಿ, ತಾಲೂಕು ಕಛೇರಿ, ಸುತ್ತಾಡುವುದು. ಸಂಬಂಧ ಪಟ್ಟ ಅಧಿಕಾರಿಗಳನ್ನು ಗೋಗರೆಯುವುದು ಹೀಗೆ ಪ್ರತಿ ದಿವಸ ಬಡಪಾಯಿ ಪಿಂಚಣಿದಾರರು ಕಛೇರಿಯಿಂದ ಕಛೇರಿಗೆ ಅಲೆದಾಡುವ ಪರಿಸ್ಥಿತಿ ಸರ್ವೆ ಸಾಮಾನ್ಯವಾಗಿದೆ. ಇನ್ನು ಕೆಲವು ಕಡೆ ತಂತ್ರಾಂಶ ಅಪ್ ಡೇಟ್ ಆಗದೆ ದೂರ ದೂರದಿಂದ ಬಂದಂತಹ ಪಿಂಚಣಿದಾರರ ಕೆಲಸವೂ ಕಛೇರಿಗಳಲ್ಲಿ ಆಗದೆ ಬಹಳ ನಿರಾಶೆದೊಂದಿಗೆ ತಾಲೂಕು ಕೇಂದ್ರದಿಂದ ತಮ್ಮ ಹಳ್ಳಿಗಳಿಗೆ ಹೋಗಲು ಸಾರಿಗೆ ವೆಚ್ಚ ಭರಿಸಲು ಸಾಲ ಮಾಡಿದ್ದು, ಪ್ರಸ್ತುತ ಪಿಂಚಣಿದಾರರು ಸಾಲಗಾರರಾಗಿ ಪರಿವರ್ತನೆಯಾಗಿದ್ದಾರೆ. ಪಿಂಚಣಿ ಹಣ ದೊರಕದೆ ಪಿಂಚಣಿದಾರರು ತಮ್ಮ ಜೀವನ ನಡೆಸುವುದು ಅಸಾಧ್ಯ ಎಂಬ ವಿಷಯ ಕಹಿಸತ್ಯವಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕು. ಇದರ ಜೊತೆ ಜೊತೆಯಲ್ಲೇ ಈಗಾಗಲೇ ಪಿಂಚಣಿ ಪಾವತಿಸುವ ಕುರಿತು ಸರ್ಕಾರ ಆದೇಶ ಪತ್ರ ನೀಡಿ 2-3 ವರ್ಷ ಆಗಿದ್ದರು ಸಹ ಒಂದು ಬಾರಿಯೂ ಪಿಂಚಣಿ ನೀಡದಿರುವ ಪ್ರಕರಣಗಳು ಸಹ ವಿವಿಧ ಜಿಲ್ಲೆಗಳಲ್ಲಿ ಕಂಡು ಬಂದಿವೆ. ಹಾಗಾಗಿ ಪಿಂಚಣಿಗೆ ಸಂಬಂಧಿಸಿದ ಎರಡು ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸುತ್ತ, ಬಾಕಿ ಇರುವ ಪಿಂಚಣಿ ಹಣ ನೀಡುವ ಜೊತೆಯಲ್ಲೇ ನೂತನವಾಗಿ ಪಿಂಚಣಿ ಆದೇಶ ಪತ್ರ ನೀಡಿರುವ ಪಲಾನುಭವಿಗಳಿಗೂ ಯಾವಾಗ ಆದೇಶ ಪತ್ರ ನೀಡಿದ್ದಾರೆ ಅಲ್ಲಿಂದ ಇಲ್ಲಿಯವರೆಗೂ ಏಕಕಾಲಕ್ಕೆ ಒಂದೇ ಕಂತಿನಲ್ಲಿ ಹಣ ನೀಡ ಬೇಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಇಲ್ಯಜ್ ಮಹಮ್ಮದ್ ತುಂಬೆ ರವರು ಆಗ್ರಹಿಸಿದ್ದಾರೆ.

Leave A Comment