03
Apr

ಪತ್ರಿಕಾ ಪ್ರಕಟಣೆ

ಬೆಂಗಳೂರು, 02 ಏಪ್ರಿಲ್ 2023: ಮುಸ್ಲಿಮರನ್ನು ದ್ವೇಷಿಸುವುದು, ಹಿಂಸಿಸುವುದು ಮತ್ತು ಅವರ ಮೀಸಲಾತಿಯಂತಹ ಹಕ್ಕುಗಳನ್ನು ಕಸಿಯುವುದೇ ತಮ್ಮ ಸರ್ಕಾರದ ಮೂಲ ಗುರಿ ಎಂಬಂತೆ ಆಡಳಿತ ನಡೆಸುತ್ತಿರುವ ಭ್ರಷ್ಟ ಕೋಮುವಾದಿ ಬಿಜೆಪಿ ಸರ್ಕಾರದ ಮುಸ್ಲಿಂ ವಿರೋಧಿ ನೀತಿಯ ಪರಿಣಾಮ ಗೋ ಭಯೋದ್ಪಾದನೆಗೆ ಮತ್ತೊಬ್ಬ ಅಮಾಯಕ ಮುಸ್ಲಿಂ ಬಲಿಯಾಗಿದ್ದಾನೆ. ಪುನೀತ್ ಕೆರೆಹಳ್ಳಿ ಎಂಬ ಪುಡಿ ರೌಡಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕದೆ, ಅವನ ಕೋಮು ದಾಳಿಗಳಿಗೆ ಪರೋಕ್ಷ ಬೆಂಬಲ ಸೂಚಿಸಿದ ಈ ಸರ್ಕಾರವೇ ಇಂದು ಪುನೀತ್ ಕೆರೆಹಳ್ಳಿ ಹಾಗೂ ಆತನ ತಂಡ ಮಂಡ್ಯ ಜಿಲ್ಲೆಯ ಇದ್ರೀಸ್ ಪಾಷಾ ಎಂಬ ಮುಸ್ಲಿಂ ಯುವಕನನ್ನು ಕನಕಪುರದ ಬಳಿ ಘೋರವಾಗಿ ಹಿಂಸಿಸಿ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿರುವುದಕ್ಕೆ ಹೊಣೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕೋಮುವಾದಿ ಸರ್ಕಾರ, ಅದರಲ್ಲೂ ಬಸವರಾಜ ಬೊಮ್ಮಾಯಿ ನೇತೃತ್ವದ ಭ್ರಷ್ಟ ಕೋಮುವಾದಿ ಸರ್ಕಾರ ರಾಜ್ಯಕ್ಕೆ ಎರಡು ಹಲಗಿನ ಕತ್ತಿಯಾಗಿದೆ. ಒಂದೆಡೆ 40% ಭ್ರಷ್ಟಾಚಾರದ ಮೂಲಕ ಜನರನ್ನು ಲೂಟಿ ಮಾಡಿ ಹಿಂಸಿಸುತ್ತಿದೆ. ಇನ್ನೊಂದೆಡೆ ತಮ್ಮ ರಾಜಕೀಯ ಉದ್ದೇಶಕ್ಕೆ ಇಡೀ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ಪರೋಕ್ಷವಾಗಿ ಪೋಷಿಸುತ್ತ, ರಾಜ್ಯದಲ್ಲಿ ದಿನ ಬೆಳಗಾದರೆ ಕೋಮು ಗಲಭೆಗಳು ಮತ್ತು ಬರ್ಬರ ಹತ್ಯೆಗಳಿಗೆ ಕಾರಣವಾಗುತ್ತಿದೆ. ಕಾನೂನು ಸುವ್ಯವಸ್ಥೆ ಎಂಬುದು ರಾಜ್ಯದಲ್ಲಿ ಅಕ್ಷರಶಃ ಅಳಿಸಿಹೋಗಿದೆ ಎಂದು ಮಜೀದ್ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಆರೋಪಿಸಿದ್ದಾರೆ.

ಈ ಎಲ್ಲ ಕೊಲೆ, ದೌರ್ಜನ್ಯ, ಶೋಷಣೆಯ ನಡುವೆ ಮುಸ್ಲಿಂ ಸಮುದಾಯ ಅನಾಥ ಸ್ಥಿತಿಗೆ ತಲುಪಿದೆ. ವಿರೋಧ ಪಕ್ಷಗಳು ಈ ಬಗ್ಗೆ ಚಕಾರ ಎತ್ತದೆ ಈ ಪಾಪದಲ್ಲಿ ತಮ್ಮ ಪಾಲೂ ಇರುವಂತೆ ನೋಡಿಕೊಳ್ಳುತ್ತಿವೆ. ಕೊಲೆಯಾದ ಇದ್ರೀಸ್ ಪಾಷಾ ಕೊಲೆಯನ್ನು ನಾವು ಕಠಿಣ ಶಬ್ದಗಳಿಂದ ಖಂಡಿಸುತ್ತೇವೆ ಮತ್ತು ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತೇವೆ. ಈ ರಾಜ್ಯದ ಪೋಲಿಸರಲ್ಲಿ ಕನಿಷ್ಠ ಕರ್ತವ್ಯ ಪ್ರಜ್ಞೆ ಉಳಿದಿದ್ದರೆ ತಕ್ಷಣ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಮಾಜ ವಿರೋಧಿ ಚಟುವಟಿಕೆ ತಂಡವನ್ನು ಬಂಧಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಕಟಣೆ:
ರಿಯಾಝ್ ಕಡಂಬು
ರಾಜ್ಯ ಮಾಧ್ಯಮ ಉಸ್ತುವಾರಿ
SDPI ಕರ್ನಾಟಕ
8073344640

Leave A Comment