20
Jul

ಬಿಜೆಪಿ ವಿಪಕ್ಷ ನಾಯಕನಿಲ್ಲದೆ ಸದನಕ್ಕೆ ಬಂದು ಅದನ್ನು ಅವಮಾನಿಸಿದ್ದು ಸಾಲದೆಂಬಂತೆ ಸ್ಪೀಕರ್ ಪೀಠಕ್ಕೆ ಅವಮಾನಿಸಿ ತನ್ನ ಸಂವಿಧಾನ ವಿರೋಧಿ ನಿಲುವಿನ ವಿಸ್ತಾರ ಪ್ರದರ್ಶಿಸಿದೆ:
ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 20 ಜುಲೈ 2023: ಕರ್ನಾಟಕದ ವಿಧಾನಸಭೆಯ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೆ
ಅಧಿವೇಶನ ನಡೆಯುತ್ತಿರುವುದು ಇದೇ ಮೊದಲು. ಈ ಬೆಳವಣಿಗೆಯೇ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಿಲುವು ಎಂದು ನಾವೆಲ್ಲ ಪರಿಗಣಿಸುತ್ತಿದ್ದ ಸಂದರ್ಭದಲ್ಲಿ ತಾನು ಸಂವಿಧಾನವನ್ನು ಇನ್ನೂ ಆಳಕ್ಕೆ ಅವಮಾನಿಸಬಲ್ಲೆ ಎಂದು ತೋರಿಸಿಕೊಟ್ಟ ಪ್ರಕರಣವೇ ನಿನ್ನೆ ಸದನದಲ್ಲಿ ಬಿಜೆಪಿ ಶಾಸಕರು ಸ್ಪೀಕರ್‌ ಪೀಠಕ್ಕೆ ಮಾಡಿರುವ ಅವಮಾನ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್‌ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಟೀಕಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ಬಿಜೆಪಿ ನಾಯಕರು ರಾಜ್ಯದ ಜನರ ಮೇಲೆ ಸೇಡು ತೀರಿಸಿಕೊಳ್ಳುವ ನಿರ್ಣಯಕ್ಕೆ ಬಂದಂತೆ ಕಾಣುತ್ತದೆ. ಅದರ ಭಾಗವಾಗಿ ವಿಪಕ್ಷದ ನಾಯಕನ ಆಯ್ಕೆ ಮಾಡದೆ ಸದನವನ್ನು ಮತ್ತು ಜನರು ಕೊಟ್ಟ ತೀರ್ಪನ್ನು ಅವಮಾನಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ತಮಗೆ ಮತ ನೀಡದ ಜನರ ಸಮಸ್ಯೆಗಳ ಚರ್ಚೆ ನಡೆಯಲು ಅನುವು ಮಾಡಿಕೊಡಬಾರದು ಎಂಬ ಉದ್ದೇಶದಿಂದ ಸದನದಲ್ಲಿ ನಿರಂತರ ಗದ್ದಲ, ಗಲಾಟೆ ಮಾಡುತ್ತಲೇ ಬಂದಿದ್ದಾರೆ. ಇಷ್ಟಕ್ಕೆ ತೃಪ್ತಿಯಾಗದ ನಾಯಕನಿಲ್ಲದ ಬಿಜೆಪಿ ಶಾಸಕರ ಪಡೆ ಸಭಾಧ್ಯಕ್ಷರ ಪೀಠಕ್ಕೆ ಕರ್ನಾಟಕ ಹಿಂದೆಂದೂ ಕಂಡರಿಯದ ಮಟ್ಟದಲ್ಲಿ ಅವಮಾನಿಸಿದ್ದಾರೆ. ಈ ಹಿಂದೆಯೂ ವಿರೋಧಪಕ್ಷಗಳು ಸದನದಲ್ಲಿ ತಮ್ಮ ಭಿನ್ನಾಭಿಪ್ರಾಯ, ಪ್ರತಿಭಟನೆಯನ್ನು ತೋರಿರುವ ಘಟನೆಗಳು ನಡೆದಿವೆ. ಆದರೆ ಯಾರೂ ಕೂಡ ಸಭಾಧ್ಯಕ್ಷರ ಪೀಠಕ್ಕೆ ಅಷ್ಟೊಂದು ಸಮೀಪ ಬಂದು ಮಸೂದೆಗಳ ಕಾಗದಗಳನ್ನು ಹರಿದು ಪೀಠದ ಮೇಲೆ ಕುಳಿತಿರುವವರ ಮುಖಕ್ಕೆ ತಾಕುವಂತೆ ಎಸೆದಂತಹ ಅಸಭ್ಯ ವರ್ತನೆ ಮಾಡಿರಲಿಲ್ಲ. ನಿನ್ನೆಯ ಘಟನೆ ಅತ್ಯಂತ ಖಂಡನೀಯ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಅಸಭ್ಯ ವರ್ತನೆ ತೋರಿದ 10 ಮಂದಿ ಬಿಜೆಪಿ ಶಾಸಕರನ್ನು ಈ ಅಧಿವೇಶನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಇದಿಷ್ಟೇ ಕ್ರಮ ಸಾಲದು. ಆ ಹತ್ತೂ ಶಾಸಕರನ್ನು ಅವರ ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು. ಅದರ ಜೊತೆಗೆ ಬಿಜೆಪಿ ಶಾಸಕರ ವರ್ತನೆಗೆ ಜವಾಬ್ದಾರಿ ಹೊರುವ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವವರೆಗೂ ಬಿಜೆಪಿ ಸದಸ್ಯರಿಗೆ ಅಧಿವೇಶನಕ್ಕೆ ಪ್ರವೇಶ ನೀಡಬಾರದು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಒತ್ತಾಯ ಮಾಡಿದ್ದಾರೆ.

Next Post

Leave A Comment