ರಾಜ್ಯದ ಬಿಜೆಪಿ ಸರಕಾರ 62 ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಬಿಜೆಪಿಯ ಸಂಸದರು ಹಾಗೂ ಶಾಸಕರು ಮಾಡಿದ ಗುರುತರವಾದ ಕ್ರಿಮಿನಲ್ ಕೃತ್ಯ ಪ್ರಕರಣಗಳು ಇವುಗಳಲ್ಲಿ ಸೇರಿವೆ. ಸಂಸದ ಪ್ರತಾಪಸಿಂಹ, ಶಾಸಕರಾದ ರೇಣುಕಾಚಾರ್ಯ ಹಾಗೂ ಬಿ ಸಿ ಪಾಟೀಲರ ಬೆಂಬಲಿಗರ ಕ್ರಿಮಿನಲ್ ಕೃತ್ಯಗಳನ್ನು ಒಳಗೊಂಡಂತೆ ಕೇಸುಗಳನ್ನು ರದ್ದುಗೊಳಿಸಲು ತನ್ನ ಸಂಪುಟ ಸಭೆಯಲ್ಲಿ ನಿರ್ಧರಿಸುವ ಮೂಲಕ ಕ್ರಿಮಿನಲ್ ಹಾಗೂ ಕೋಮುಗಲಭೆಯ ಕಿಡಿಗೇಡಿಗಳನ್ನು ರಕ್ಷಿಸುತ್ತಿದೆ. ಇಂತಹ ಸರಕಾರದಿಂದ ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ನೆಲೆಸುವುದು ಹೇಗೆ ಸಾಧ್ಯ? ಕುರಿಗಳ ವೇಷದಲ್ಲಿ ತೋಳಗಳು ರಾಜ್ಯವನ್ನು ಆಳಿದಂತಾಗಿದೆ ಎಂದು ಎಸ್.ಡಿ.ಪಿ.ಐ ರಾಜ್ಯಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಾಜ್ಯದ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಯವರು ಬಜರಂಗದಳದ ಮುಖಂಡನೊಬ್ಬನೊಡನೆ “ನಿನ್ನ ಯಾವುದೇ ಕೇಸುಗಳನ್ನು ತೆಗೆದು ಹಾಕುತ್ತೇನೆ” ಎಂದಿರುವುದನ್ನು ಇಡೀ ರಾಜ್ಯದ ಜನತೆ ನೋಡಿದೆ. ಈ ಹಿಂದೆಯೂ ಬಿಜೆಪಿ ಸರಕಾರ ಅತ್ಯಂತ ಗಂಭೀರ ಕ್ರಿಮಿನಲ್ ಕೇಸುಗಳನ್ನು ರದ್ದುಗೊಳಿಸಿದೆ. ಕಾರವಾರದಲ್ಲಿ ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಿದ ಘಟನೆ ಹಾಗೂ ಐಜಿಪಿ ಕಾರ್ ಚಾಲಕನಿಗೆ ಅವರ ಎದುರಲ್ಲೇ ಥಳಿಸಿದ ಘಟನೆಯ ಸಂಘಪರಿವಾರದ ಆರೋಪಿಗಳ ಕೇಸುಗಳನ್ನು ಬಿಜೆಪಿ ಸರಕಾರ ವಾಪಸ್ ಪಡೆದುಕೊಂಡಿತ್ತು. ದ್ವೇಷ ರಾಜಕಾರಣ, ಕೋಮುವಿಭಜನೆಯ ಮೂಲಕವೇ ಅಧಿಕಾರಕ್ಕೇರಿದ ಬಿಜೆಪಿ ಅಧಿಕಾರವನ್ನು ಉಳಿಸಲು ಎಂತಹ ನಿಕೃಷ್ಟತೆಗೂ ತಲುಪಲು ಹೇಸದು ಎಂದು ಇದರಿಂದ ಸಾಬೀತಾಗುತ್ತಿದೆ. ಇಂತಹ ಸರಕಾರದ ವಿರುದ್ಧ ರಾಜ್ಯದ ಜನತೆ ಎಚ್ಚೆತ್ತು ಕೊಳ್ಳಬೇಕು ಎಂದು ಇಲ್ಯಾಸ್ ತುಂಬೆ ಕರೆ ನೀಡಿದ್ದಾರೆ.

Leave A Comment