ಪತ್ರಿಕಾ ಪ್ರಕಟಣೆ

ಬೆಂಗಳೂರು, 20 ಮೇ 2023: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಹಾಗೆಯೇ ನೂತನ ಸಂಪುಟ ಸೇರಿರುವ ಎಲ್ಲ ಸಚಿವರಿಗೂ ಅಭಿನಂದನೆಗಳು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನಸಾಮಾನ್ಯರಿಗೆ ನೀಡಿರುವ ಎಲ್ಲಾ ವಾಗ್ದಾನಗಳನ್ನು ಸಂಪೂರ್ಣವಾಗಿ ನೆರವೇರಿಸಬೇಕು. ಷರತ್ತುಗಳ ಹೆಸರಿನಲ್ಲಿ ಜನರನ್ನು ವಂಚಿಸುವ ತಂತ್ರಗಳನ್ನು ಮಾಡಬಾರದು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಮ್ಮ ಪತ್ರಿಕ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಭರವಸೆಗಳನ್ನು ನೀಡಿದೆ. ಆ ಭರವಸೆಗಳನ್ನು ನಂಬಿ ಜನ ಅವರಿಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಆ ಭರವಸೆಗಳಲ್ಲಿ ಬಹು ಮುಖ್ಯವಾದ ಭರವಸೆಗಳೆಂದರೆ, ಅವರು ನೀಡಿರುವ ಪಂಚ ಗ್ಯಾರಂಟಿಗಳು. ಇಂದು ನಡೆದ ಮೊದಲ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯನವರ ಸರ್ಕಾರ ಈ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಈ ಗ್ಯಾರಂಟಿಗಳಿಗೆ ಪ್ರಚಾರದ ಸಂದರ್ಭದಲ್ಲಿ ಹೇಳಿರದ ಷರತ್ತುಗಳನ್ನು ಜೋಡಿಸಲಾಗುತ್ತಿದೆ. ಉದಾಹರಣೆಗೆ ನಿರುದ್ಯೋಗ ಭತ್ಯೆ 2022-23 ರಲ್ಲಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಎಂದು ಹೇಳಲಾಗಿದೆ. ಹಾಗಾದರೆ ಈ ಹಿಂದೆ ಪಾಸಾಗಿ ಉದ್ಯೋಗ ಸಿಗದೆ ಒದ್ದಾಡುತ್ತಿರುವ ಯುವಕರು ಏನು ಮಾಡಬೇಕು? ವರ್ಷಗಳಿಂದ ಉದ್ಯೋಗವಿಲ್ಲದೆ ಒದ್ದಾಡುತ್ತಿರುವ ಅವರು ಅದೇ ಯಾತನೆಯಲ್ಲೇ ಬದುಕಬೇಕೆ? ಇಂತಹ ವಾಗ್ದಾನದಿಂದ ನುಣುಚಿಕೊಳ್ಳುವ ಷಡ್ಯಂತ್ರಗಳನ್ನು ಕಾಂಗ್ರೆಸ್ ಕೈ ಬಿಡಬೇಕು. ಅದೇ ಸಂದರ್ಭದಲ್ಲಿ ಈ ಗ್ಯಾರಂಟಿಗಳನ್ನು ನೆರವೇರಿಸಲು ಸರ್ಕಾರಕ್ಕೆ ವರ್ಷಕ್ಕೆ ಸುಮಾರು 50 ಸಾವಿರ ಕೋಟಿಗಳಷ್ಟು ಖರ್ಚು ಬರಬಹುದು ಎಂದು ಹೇಳಿದ್ದಾರೆ. ಇಷ್ಟು ಮೊತ್ತದ ಹಣವನ್ನು ಕಾಂಗ್ರೆಸ್ ಸರ್ಕಾರ ಎಲ್ಲಿಂದ ಕ್ರೂಡೀಕರಿಸಲಿದೆ ಎಂಬ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಏಕೆಂದರೆ ಈಗಾಗಲೇ ರಾಜ್ಯದ ಒಟ್ಟು ಸಾಲ ಸುಮಾರು 5.64 ಲಕ್ಷ ಕೋಟಿಗಳಷ್ಟು ಇದೆ. ಕಳೆದ ವರ್ಷಗಳಲ್ಲಿ ಬೊಮ್ಮಾಯಿ ಸರ್ಕಾರ ಸುಮಾರು 3.22 ಲಕ್ಷ ಕೋಟಿ ಸಾಲ ಮಾಡಿದೆ. ಇಷ್ಟು ದೊಡ್ಡ ಮೊತ್ತದ ಸಾಲ ಈಗಾಗಲೇ ಇರುವಾಗ ನೂತನ ಸರ್ಕಾರದ ಗ್ಯಾರಂಟಿಗಳಿಗೆ ಮತ್ತೆ ಸಾಲ ಮಾಡುತ್ತಾರೆಯೇ? ಇಲ್ಲವಾದರೆ ಅಷ್ಟು ದೊಡ್ಡ ಮೊತ್ತ ಎಲ್ಲಿಂದ ತರಲಿದ್ದಾರೆ? ರಾಜ್ಯವನ್ನು ಅನಗತ್ಯ ಸಾಲಗಳಿಗೆ ದೂಡಬಾರದು ಎಂದು ಅಬ್ದುಲ್ ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಜನರಿಗೆ ಉಚಿತ ಸೌಲಭ್ಯಗಳನ್ನು ಒದಗಿಸುವುದು ಒಂದು ಕಡೆಯಾದರೆ, ಇನ್ನೊಂದೆಡೆ ಅವರಿಗೆ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ಶಾಶ್ವತ ಪರಿಹಾರ ಒದಗಿಸಬಹುದಾದ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು. ಉದಾಹರಣೆಗೆ ಪ್ರಸ್ತುತ ಸುಮಾರು 2.50 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇವೆ. ಅವುಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. ಹಾಗೆಯೇ ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ಸಾಲ ಸೌಲಭ್ಯ ಒದಗಿಸಲು ಇರುವ ನಿಯಮ, ಷರತ್ತುಗಳ ಬಗ್ಗೆ ಮರು ಪರಿಶೀಲನೆ ನಡೆಸಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಬೇಕು. ಆ ಮೂಲಕ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Leave A Comment